
ಶಿವಮೊಗ್ಗ : 2022ರಲ್ಲಿ ತುಂಗಾ ನದಿ ತೀರದಲ್ಲಿ ನಡೆದ ಪ್ರಾಯೋಗಿಕ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪರಾಧಿ ಅರಾಫತ್ ಅಲಿಗೆ ಎನ್ಐಎ ವಿಶೇಷ ನ್ಯಾಯಾಲಯ 6 ವರ್ಷ ಜೈಲು ಶಿಕ್ಷೆ ಹಾಗೂ ₹47,000 ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ತೀರ್ಪು ನೀಡಿದೆ.
ತೀರ್ಥಹಳ್ಳಿ ಮೂಲದ ಅರಾಫತ್ ಅಲಿಯನ್ನು 2023ರಲ್ಲಿ ಕೀನ್ಯಾದ ನೈರೋಬಿಯಿಂದ ದೆಹಲಿಗೆ ಬಂದಾಗ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು ನಂತರ ವಿಚಾರಣೆ ನಡೆಸಿ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ ಆರೋಪಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾನೆ.
ನ್ಯಾಯಮೂರ್ತಿ ಕೆಂಪರಾಜು ಅವರ ಮುಂದೆ ನಡೆದ ವಿಚಾರಣೆಯಲ್ಲಿ ವಾದ-ಪ್ರತಿವಾದಗಳನ್ನು ಆಲಿಸಿ ಶಿಕ್ಷೆ ಪ್ರಕಟಿಸಲಾಗಿದೆ. ಇದೇ ಪ್ರಕರಣದಲ್ಲಿ ಈಗಾಗಲೇ 2025ರಲ್ಲಿ ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದ್ದು, ಒಟ್ಟು ಮೂವರಿಗೆ ಶಿಕ್ಷೆಯಾಗಿದೆ. ಇನ್ನೂ 9 ಮಂದಿಯ ವಿರುದ್ಧ ವಿಚಾರಣೆ ಮುಂದುವರಿದಿದೆ.
ಎನ್ಐಎ ಮಾಹಿತಿ ಪ್ರಕಾರ, ಅರಾಫತ್ ಅಲಿ ನಿಷೇಧಿತ ಐಸಿಸ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ಯುವಕರನ್ನು ಸಂಘಟನೆಗೆ ಸೆಳೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ.
2019ರಲ್ಲಿ ಬೆಂಗಳೂರಿನಲ್ಲಿ ಮುಸಾವೀರ್ ಹುಸೇನ್ ಶಾಹೀಬ್ ಹಾಗೂ ಅಬ್ದುಲ್ ಮತೀನ್ ತಾಹ ಅವರನ್ನು ಭೇಟಿಯಾಗಿ ಉಗ್ರ ಚಟುವಟಿಕೆಗಳಿಗೆ ಪ್ರೇರಣೆ ನೀಡಿದ್ದಾನೆ ಎನ್ನಲಾಗಿದೆ.ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ಹಣಕಾಸು ನೆರವು ಒದಗಿಸಿ ಸಂಚು ರೂಪಿಸುವಲ್ಲಿ ಸಕ್ರಿಯವಾಗಿದ್ದ ಎಂದು ಎನ್ಐಎ ಹೇಳಿದೆ.
ಬಂಧನ ಭೀತಿಯಿಂದ 2020ರಲ್ಲಿ ವಿದೇಶಕ್ಕೆ ಪಲಾಯನಗೊಂಡಿದ್ದ ಆತ, ಅಲ್ಲಿಂದಲೇ ಉಗ್ರ ಚಟುವಟಿಕೆಗಳನ್ನು ಸಂಚಾಲಿಸುತ್ತಿದ್ದನೆಂಬ ಆರೋಪವೂ ಇದೆ.ಇದಲ್ಲದೆ, ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂಬಂಧ ಹೊಂದಿದ್ದ ಮುಸಾವೀರ್ ಹಾಗೂ ಅಬ್ದುಲ್ ಮತೀನ್ ಅವರನ್ನು 2024ರಲ್ಲಿ ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿತ್ತು.
ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಶಂಕಿತ ಮೊಹಮ್ಮದ್ ಶಾರೀಕ್ ನ್ಯಾಯಾಂಗ ಬಂಧನದಲ್ಲಿದ್ದು, ಏಪ್ರಿಲ್ 25ಕ್ಕೆ ಅಂತಿಮ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.


