
ಚಿಕ್ಕನಾಯಕನಹಳ್ಳಿಕಳೆದ ಒಂದು ತಿಂಗಳಿನಿಂದ ಬಯಲಿನಲ್ಲಿ ವಾಸವಿರುವ ನಿರಾಶ್ರಿತ ಅಲೆಮಾರಿ ಕುಟುಂಬಕ್ಕೆ ಸೂರು ಕಲ್ಪಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.ತಮ್ಮ ಆರು ಮಕ್ಕಳೊಂದಿಗೆ ಅಂಬೇಡ್ಕರ್ ಭವನ ಹಾಗೂ ಸ್ತ್ರೀಶಕ್ತಿ ಭವನ ಆವರಣದ ಬಯಲಿನಲ್ಲಿ ಕೊರಮ-ಕೊರಚಾರ್ ಸಮುದಾಯಕ್ಕೆ ಸೇರಿದ ದುರ್ಗಪ್ಪ ಮತ್ತು ಜ್ಯೋತಿ ದಂಪತಿಗಳು ಅನಾಥರಂತೆ ಜೀವನ ಸಾಗಿಸುತ್ತಿದ್ದಾರೆ.ಪಟ್ಟಣದ ಅಂಬೇಡ್ಕರ್ ಭವನ ಮತ್ತು ಸ್ತ್ರೀಶಕ್ತಿ ಭವನದ ಆವರಣದಲ್ಲಿ ಕಳೆದ ಸುಮಾರು ಒಂದು ತಿಂಗಳಿನಿಂದ ಯಾವುದೇ ಶಾಶ್ವತ ಆಶ್ರಯವಿಲ್ಲದೆ ಈ ಕುಟುಂಬ ವಾಸವಿದ್ದು, ಮಕ್ಕಳ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದೆ.

ಕುಟುಂಬದ ಮಕ್ಕಳಲ್ಲಿ ಕೆಲವರಿಗೆ ಇನ್ನೂ ಆಧಾರ್ ಕಾರ್ಡ್ ಕೂಡ ಲಭ್ಯವಾಗಿಲ್ಲ. ಮಕ್ಕಳ ಹೇಳಿಕೆಯ ಪ್ರಕಾರ, ಅವರು ಕುರುಬಳ್ಳಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ದುರ್ಗಮ್ಮ ಹಾಗೂ ವೆಂಕಟೇಶ್ ನಾಲ್ಕನೇ ತರಗತಿ, ಚಿಕ್ಕದುರ್ಗಮ್ಮ ಎರಡನೇ ತರಗತಿ ಮತ್ತು ದ್ಯಾಮವ್ವ ಮೊದಲನೇ ತರಗತಿಯಲ್ಲಿ ಓದುತ್ತಿದ್ದಾರೆ. ಶ್ವೇತಾ ಸೇರಿದಂತೆ ಇನ್ನಿಬ್ಬರು ಪುಟ್ಟ ಮಕ್ಕಳು ಸ್ಥಳೀಯ ಅಂಗನವಾಡಿಗೆ ತೆರಳುತ್ತಿದ್ದಾರೆ.“ಮೂರು-ನಾಲ್ಕು ದಿನಗಳಲ್ಲಿ ನಿವೇಶನ ಒದಗಿಸುತ್ತೇವೆ ಎಂದು ತಹಸೀಲ್ದಾರ್ ಮಮತಾ ಅವರು ತಿಂಗಳ ಹಿಂದೆ ಭರವಸೆ ನೀಡಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಅವರ ಮಾತಿನ ಮೇರೆಗೆ ನಾವು ಇಲ್ಲೇ ಉಳಿದುಕೊಂಡಿದ್ದೇವೆ. ಮಳೆ, ಬಿಸಿಲು, ಹುಳುಹುಪ್ಪಟೆಗಳ ನಡುವೆ ಆಕಾಶದ ಕೆಳಗೆ ಬದುಕು ಸಾಗಿಸುವ ಪರಿಸ್ಥಿತಿ ಬಂದಿದೆ” ಎಂದು ದುರ್ಗಪ್ಪ ಮತ್ತು ಜ್ಯೋತಿ ದಂಪತಿಗಳು ಅಳಲು ತೋಡಿಕೊಂಡಿದ್ದಾರ.

ಈ ಕುರಿತು ಪ್ರತಿಕ್ರಿಯಿಸಿರುವ ದಲಿತ ಸಂಘರ್ಷ ಸ🙄ಮಿತಿ ತಾಲೂಕು ಸಂಚಾಲಕ ರಮೇಶ್ ಯರೇಕಟ್ಟೆ, “ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು ತಕ್ಷಣ ಮಾನವೀಯತೆ ಮೆರೆದು ಈ ಕುಟುಂಬಕ್ಕೆ ಶಾಶ್ವತ ವಸತಿ, ದಾಖಲೆಗಳು ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.ಸ್ಥಳೀಯರು ಕೂಡ ಆಡಳಿತದ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.




