
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಯಿತು.ಸಂಘದ ಕಾರ್ಯದರ್ಶಿ ಮಾಳಪ್ಪ ಬಂಗಾಳಿ ಅವರು ಸುಮಾರು 28 ಲಕ್ಷ ರೂಪಾಯಿಗಳ ಲೆಕ್ಕಪತ್ರ ನೀಡದೇ ಸಂಘಕ್ಕೆ ನಷ್ಟ ಉಂಟುಮಾಡಿದ್ದಾರೆ ಎಂದು ಸದಸ್ಯರು ಆರೋಪಿಸಿದರು. 2019ರಿಂದ ಮಾಜಿ ಅಧ್ಯಕ್ಷರಾದ ಅಡಿವೆಪ್ಪ ಲಕ್ಕಲಕಟ್ಟಿ ಹಾಗೂ ಶರಣಪ್ಪ ಅಡವಿಹಳ್ಳಿ ಅವರ ಅವಧಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಮಾತು ಸಭೆಯಲ್ಲಿ ಕೇಳಿಬಂತು.ಸಂಘದ ಲೆಕ್ಕಪತ್ರಗಳ ಕುರಿತು ಅನುಮಾನ ವ್ಯಕ್ತಪಡಿಸಿದ ಸದಸ್ಯರು, “ಸಂಘದ ಹಣದ ವ್ಯವಹಾರದಲ್ಲಿ ಪಾರದರ್ಶಕತೆ ಇಲ್ಲ” ಎಂದು ಆಕ್ರೋಶ ಹೊರಹಾಕಿದರು.ಸಭೆಯಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಶರಣಪ್ಪ ಸಿ. ಮುತ್ತಳ್ ಅವರು, “ಸಂಘದ ಹೆಸರಿನಲ್ಲಿ ಮೋಸ ಮಾಡಿರುವ ಕಾರ್ಯದರ್ಶಿ ಮಾಳಪ್ಪ ಬಂಗಾಳಿ ಅವರನ್ನು ತಕ್ಷಣ ಅಮಾನತು ಮಾಡಬೇಕು. ಇದೇ ತಿಂಗಳ 15/05/2026ರೊಳಗೆ ಸಂಪೂರ್ಣ ಲೆಕ್ಕಪತ್ರ ಒಪ್ಪಿಸಿ, ಬಾಕಿ ಇರುವ ಸುಮಾರು 28 ಲಕ್ಷ ರೂ.ಗಳನ್ನು ಸಂಘಕ್ಕೆ ಕಟ್ಟಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.ಸಂಘದ ಸದಸ್ಯರು ಹಾಗೂ ಸ್ಥಳೀಯರು ಕೂಡ ಸೇರಿ, “ಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರವನ್ನು ಸಮಗ್ರವಾಗಿ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.ವರದಿ: ಶಶಿಧರ್ ಹೊಸಮನಿ, ಕೊಪ್ಪಳ ಜಿಲ್ಲಾ ಯಲಬುರ್ಗಾ




