
ಕಾಗವಾಡ : ಅಥಣಿ ಅಬಕಾರಿ ಇಲಾಖೆಯ ನಿರ್ಲಕ್ಷ್ಯವೇನೋ ಎಂಬ ಗಂಭೀರ ಅನುಮಾನಕ್ಕೆ ಕಾರಣವಾಗುವ ಘಟನೆ ಬೆಳಕಿಗೆ ಬಂದಿದೆ. ಜೂಗುಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಹಾಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ MSIL ಮಳಿಗೆಯಲ್ಲಿ ಸರಕಾರಿ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.ಸರ್ಕಾರದ ನಿಯಮಾವಳಿಗಳ ಪ್ರಕಾರ MSIL ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಮಾತ್ರ ಅವಕಾಶವಿದ್ದು, ಬಾರ್ ಮಾದರಿಯ ವ್ಯವಸ್ಥೆ ಕಲ್ಪಿಸುವುದು ನಿಷೇಧಿತ. ಆದರೆ ಇಲ್ಲಿ ಮಳಿಗೆಯನ್ನು ಬಾರ್ ರೀತಿಯಲ್ಲಿ ರೂಪಾಂತರಿಸಿ, ಯಾವುದೇ ಭಯವಿಲ್ಲದೆ ವ್ಯವಹಾರ ನಡೆಸಲಾಗುತ್ತಿದೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಮಾಹಿತಿ ನೀಡಲು ಚಿಕ್ಕೋಡಿ ಅಬಕಾರಿ ಡಿಸಿ ಅವರಿಗೆ ಕರೆ ಮಾಡಿದರೂ ಸ್ಪಂದನೆ ದೊರೆಯಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣದ ಗಂಭೀರತೆಯನ್ನು ಲೆಕ್ಕಿಸದೇ ಮೌನ ವಹಿಸಿರುವುದು ಸಾರ್ವಜನಿಕರಲ್ಲಿ ಅನುಮಾನಗಳಿಗೆ ಕಾರಣವಾಗಿದೆ.“ನಿಯಮ ಉಲ್ಲಂಘನೆ ಎಲ್ಲರಿಗೂ ಗೊತ್ತಿದ್ದರೂ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿ ಉಳಿದಿರುವುದು ಏಕೆ?” ಎಂಬ ಪ್ರಶ್ನೆ ಸ್ಥಳೀಯರಲ್ಲಿ ಜೋರಾಗಿದೆ. ತಾಲ್ಲೂಕು ಆಡಳಿತದ ಕಾರ್ಯಪದ್ಧತೆಯ ಮೇಲೂ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.

ಇದಲ್ಲದೆ, ಈ ಮಳಿಗೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಅಧಿಕಾರಿಗಳ ಆಶ್ರಯವಿದೆಯೇ? ಮಾಸಿಕ ಮಾಮೂಲಿ ವ್ಯವಹಾರ ನಡೆಯುತ್ತಿದೆಯೇ? ಅಥವಾ ಮಳಿಗೆ ಮಾಲೀಕರಿಗೆ ಯಾವುದೇ ಭಯವಿಲ್ಲದೆ ಕಾನೂನು ಮೀರುವ ಧೈರ್ಯ ಹೇಗೆ ಬಂದಿದೆ? ಎಂಬ ಗಂಭೀರ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.ಇದೀಗ ಈ ಘಟನೆಗೆ ಸಂಬಂಧಪಟ್ಟಂತೆ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವರೇ ಅಥವಾ ಮೌನವೇ ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ವರದಿ : ಆನಂದ ಕಾಂಬಳೆ, ಕಾಗವಾಡ




