
ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಳೂಟಗಿ ಗ್ರಾಮದ ನಿವಾಸಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿ Andappa Kuri ಅವರಿಗೆ ‘ಸಾಲು ಮರದ ತಿಮ್ಮಕ್ಕ’ ಅವರ ಹೆಸರಿನಲ್ಲಿ ನೀಡಲಾಗುವ ಪ್ರತಿಷ್ಠಿತ ರಾಷ್ಟ್ರೀಯ ಗೌರವ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅದ್ದೂರಿ ಸನ್ಮಾನ ಸಮಾರಂಭ ನೆರವೇರಿತು.ಪರಿಸರ ಸಂರಕ್ಷಣೆ, ಅರಣ್ಯ ಅಭಿವೃದ್ಧಿ ಹಾಗೂ ಹಸಿರು ಚಳುವಳಿಯತ್ತ ತಮ್ಮ ಅಮೋಘ ಕೊಡುಗೆ ನೀಡಿದ ಅಂದಪ್ಪ ಕುರಿ ಅವರ ಸಾಧನೆಗೆ ಈ ಗೌರವ ಲಭಿಸಿದ್ದು, ಇದು ಸ್ಥಳೀಯರಿಗೆ ಹೆಮ್ಮೆಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಊರಿನ ಹಿರಿಯರಾದ ಯಮನೂರಪ್ಪ ಬೇವಿನಗಿಡದ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರು ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಿದರು.ಗ್ರಾಮದ ಯುವಕರು ಹಾಗೂ ಮುಖಂಡರುಗಳ ಸಂಘಟಿತ ಪ್ರಯತ್ನದಿಂದ ಆಯೋಜಿಸಲಾದ ಈ ಸನ್ಮಾನ ಕಾರ್ಯಕ್ರಮದಲ್ಲಿ ಅಂದಪ್ಪ ಕುರಿ ಅವರ ಸೇವಾ ಮನೋಭಾವ, ಪರಿಸರದ ಮೇಲಿನ ನಿಷ್ಠೆ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಪ್ರಶಂಸಿಸಲಾಯಿತು. ಗ್ರಾಮೀಣ ಭಾಗದಲ್ಲಿ ಪರಿಸರ ಜಾಗೃತಿ ಮೂಡಿಸಲು ಅವರು ಮಾಡಿದ ಕಾರ್ಯ ಶ್ಲಾಘನೀಯವೆಂದು ಭಾಷಣಕಾರರು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಬಸವರಾಜ್ ಎಂ ಬೇವಿನಗಿಡದ, ನಿಂಗಪ್ಪ ಹಿರೇಮನಿ, ಶ್ರೀಕಾಂತ್ ಬಿ, ನಿಂಗಪ್ಪ ಸೋಂಪುರ್, ಬಸವರಾಜ್ ಪಿ ಬೇವಿನಗಿಡದ ಸೇರಿದಂತೆ ಅನೇಕ ಗಣ್ಯರು, ಗ್ರಾಮಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳ ಮಹಾಪೂರವೇ ಹರಿಸಿದರು.ಅಂದಪ್ಪ ಕುರಿ ಅವರ ಸಾಧನೆ ಯುವಜನತೆಗೆ ಸ್ಪೂರ್ತಿಯಾಗಿದ್ದು, ಪರಿಸರ ಸಂರಕ್ಷಣೆಯಲ್ಲಿ ಹೆಚ್ಚಿನ ಭಾಗವಹಿಸುವಿಕೆಗೆ ದಾರಿ ತೋರಿಸುವಂತಾಗಿದೆ. ಅವರ ಸೇವೆ ಇನ್ನಷ್ಟು ವಿಸ್ತಾರವಾಗಲಿ ಎಂದು ಎಲ್ಲರೂ ಹಾರೈಸಿದರು.
✍🏻ವರದಿ : ಶಶಿಧರ್ ಹೊಸ್ಮನಿ, ಕೊಪ್ಪಳ ಜಿಲ್ಲೆ, ಯಲಬುರ್ಗಾ




