
ಕೊಪ್ಪಳ ಜಿಲ್ಲೆವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಸರ್ಕಾರ ಕಾರ್ಮಿಕರಿಗೆ ರಜೆ ಘೋಷಿಸಿ, ಗೌರವ ಸೂಚಕವಾಗಿ ಸಿಹಿ ಹಂಚಿ ದಿನಾಚರಣೆ ಆಚರಿಸಬೇಕೆಂದು ಸೂಚಿಸಿದ್ದರೂ, ಯಲಬುರ್ಗಾ ತಾಲೂಕಿನ ವಿವಿಧ ಕಾಮಗಾರಿಗಳಲ್ಲಿ ಕೂಲಿ ಕಾರ್ಮಿಕರನ್ನು ರಜೆ ನೀಡದೆ ದುಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.ತಾಲೂಕಿನಲ್ಲಿ ನಡೆಯುತ್ತಿರುವ ಸೋಲಾರ್ ಕಂಪನಿ ಕಾಮಗಾರಿಗಳಲ್ಲಿ ಹೊರ ರಾಜ್ಯವಾದ ಗುಜರಾತ್ ಮೂಲದ ಕಾರ್ಮಿಕರನ್ನು ಬಳಸಿಕೊಂಡು ನಿರಂತರವಾಗಿ ಕೆಲಸ ಮಾಡಿಸಲಾಗುತ್ತಿದೆ ಎಂದು ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷರು ಆರೋಪಿಸಿದ್ದಾರೆ.

ಕಾರ್ಮಿಕರ ಹಕ್ಕುಗಳು ಮತ್ತು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಕಾರ್ಮಿಕ ದಿನಾಚರಣೆಯಂದೇ ದುಡಿಮೆ ನಡೆಸುತ್ತಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದೇ ವೇಳೆ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳಲ್ಲಿಯೂ ಕಾರ್ಮಿಕರಿಗೆ ರಜೆ ನೀಡದೆ ಕೆಲಸ ಮಾಡಿಸಲಾಗುತ್ತಿದೆ ಎಂದು ದೂರಲಾಗಿದೆ.

ಕಾರ್ಮಿಕ ದಿನಾಚರಣೆಯಂದು ಕಾರ್ಮಿಕರಿಗೆ ಸಿಹಿ ಹಂಚಿ, ವಿಶ್ರಾಂತಿ ನೀಡಿ ಗೌರವಿಸಬೇಕಾದ ಸಂದರ್ಭದಲ್ಲಿ, ಅವರನ್ನು ಕೆಲಸಕ್ಕೆ ಹಾಜರಾಗುವಂತೆ ಮಾಡಿರುವುದು ಬೇಸರ ತಂದಿದೆ ಎಂದು ಕಾರ್ಮಿಕ ಮುಖಂಡರು ತಿಳಿಸಿದ್ದಾರೆ.ನಗರದ ತಾಲೂಕು ಪಂಚಾಯತ್ ನೂತನ ಕಟ್ಟಡ ಕಾಮಗಾರಿಯಲ್ಲಿಯೂ ಕಾರ್ಮಿಕರಿಗೆ ರಜೆ ಇಲ್ಲದೆ ಕೆಲಸ ನಡೆಯುತ್ತಿರುವುದು ಕಂಡುಬಂದಿದೆ.

“ಸರ್ಕಾರಿ ನೌಕರರಿಗೆ ಮಾತ್ರ ರಜೆ ನೀಡಿ, ಕೂಲಿ ಕಾರ್ಮಿಕರನ್ನು ದುಡಿಸುವುದು ಯಾವ ನ್ಯಾಯ?” ಎಂಬ ಪ್ರಶ್ನೆಯನ್ನು ಕಾರ್ಮಿಕರು ಮತ್ತು ಸಂಘಟನೆಗಳು ಎತ್ತಿವೆ.ಕಾರ್ಮಿಕರ ದಿನಾಚರಣೆಯ ಮಹತ್ವವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಕಾರ್ಮಿಕರ ಹಕ್ಕುಗಳನ್ನು ಗೌರವಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷರು ಆಗ್ರಹಿಸಿದ್ದಾರೆ. ತಾಲೂಕು ಕಾರ್ಮಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘಿಸಿರುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ವರದಿ: ಶಶಿಧರ್ ಕೊಪ್ಪಳ ಜಿಲ್ಲೆ





