ಕೊಪ್ಪಳ ಜಿಲ್ಲೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಗುತ್ತೂರು ಗ್ರಾಮದಲ್ಲಿ ನಿನ್ನೆ ನಡೆದ ದುರ್ಘಟನೆಯಲ್ಲಿ ರೈತನ ಎತ್ತು ಸಿಡಿಲಿನ ಹೊಡೆತಕ್ಕೆ ಬಲಿಯಾದ ಘಟನೆ ನಡೆದಿದೆ. ಗ್ರಾಮದ ರೈತನಾದ ಯಲ್ಲಪ್ಪ ಬಸಪ್ಪ ದಿವಾಣದರ ಅವರ ಎತ್ತು ಸಿಡಿಲಿನ ಅಪ್ಪಳಿಕೆಯಿಂದ ಸಾವನ್ನಪ್ಪಿದ್ದು, ಇದರಿಂದ ಕುಟುಂಬಕ್ಕೆ ಆರ್ಥಿಕ ನಷ್ಟ ಉಂಟಾಗಿದೆ.ಘಟನೆಯ ಮಾಹಿತಿ ತಿಳಿದು ಯಲಬುರ್ಗಾ ಕ್ಷೇತ್ರದ ಶಾಸಕ ಕಳಕಪ್ಪ ವಿ. ಕಂಬಳಿ ಅವರು ಗುತ್ತೂರು ಗ್ರಾಮಕ್ಕೆ ಭೇಟಿ ನೀಡಿ, ರೈತ ಯಲ್ಲಪ್ಪ ದಿವಾಣದರ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಅವರ ಅಭಿಮಾನ ಬಳಗದ ವತಿಯಿಂದ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ನೀಡಲಾಯಿತು.ಈ ದುಃಖದ ಸಂದರ್ಭದಲ್ಲಿಯೇ ಸಾರ್ವಜನಿಕ ಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಸಹ ರೈತನ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ವಿ.ಎಸ್.ಎಸ್ ಅಧ್ಯಕ್ಷ ಶರಣಪ್ಪ ರಾಂಪುರ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಮೂರ್ತಿಯ್ಯ ಶಶಿಮಠ ಹಾಗೂ ಶರಣಪ್ಪ ದಿವಾಣದರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ್, ರಾಮಣ್ಣ ಕರಿಗಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಗ್ರಾಮದಲ್ಲಿ ನಡೆದ ಈ ಘಟನೆ ರೈತ ಸಮುದಾಯದ ಆತಂಕಕ್ಕೆ ಕಾರಣವಾಗಿದ್ದು, ಸಿಡಿಲಿನಂತಹ ಪ್ರಕೃತಿ ವಿಪತ್ತುಗಳಿಂದ ಆಗುವ ನಷ್ಟಗಳಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ: ಶಶಿಧರ್ ಹೊಸಮನಿ, ಕೊಪ್ಪಳ ಜಿಲ್ಲೆ ಯಲಬುರ್ಗಾ




