
:ಬೇಲೂರು:ವಿವಾಹವಾಗಲು ಯುವತಿ ಸಿಗದೆ ಮನನೊಂದು ಯುವಕನೋರ್ವ ಆತ್ಮಹತ್ಯೆಗೆ ಶರಣಾದ ದುರ್ಘಟನೆ ಬೇಲೂರು ನಗರದಲ್ಲಿ ನಡೆದಿದೆ.ಮೃತರನ್ನು ವಿನಯ್ (35) ಎಂದು ಗುರುತಿಸಲಾಗಿದೆ. ಇವರು ನಾಗರಾಜ್ ಮತ್ತು ಪದ್ಮ ದಂಪತಿಯ ಪುತ್ರರಾಗಿದ್ದು, ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲೂಕಿನ ಗುಡ್ದೂರು ಗ್ರಾಮದ ನಿವಾಸಿಯಾಗಿದ್ದರು. ಕಳೆದ ಹತ್ತು ವರ್ಷಗಳಿಂದ ಬೇಲೂರು ನಗರದ ಶಂಕರದೇವರ ಪೇಟೆಯಲ್ಲಿ ವಾಸವಿದ್ದು, ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.ಪದವಿ ಶಿಕ್ಷಣ ಪಡೆದಿದ್ದ ವಿನಯ್ ಅವರು ಕಳೆದ ಐದುರಿಂದ ಆರು ವರ್ಷಗಳಿಂದ ವಿವಾಹಕ್ಕಾಗಿ ಯುವತಿ ಹುಡುಕುತ್ತಿದ್ದರೂ ಸಂಬಂಧ ನಿಶ್ಚಯವಾಗದೆ ಇದ್ದ ಹಿನ್ನೆಲೆಯಲ್ಲಿ ಮನನೊಂದು ಬದುಕುತ್ತಿದ್ದರೆಂದು ತಿಳಿದುಬಂದಿದೆ. ಈ ಕಾರಣದಿಂದ ಅವರು ಮಾನಸಿಕವಾಗಿ ಬೇಸರಗೊಂಡಿದ್ದು, ಕಳೆದ ಒಂದು ವಾರದಿಂದ ಕೆಲಸಕ್ಕೂ ತೆರಳದೆ ಮನೆಯಲ್ಲಿ ಏಕಾಂಗಿಯಾಗಿ ಕಾಲ ಕಳೆಯುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.ಈ ಮನಸ್ಥಿತಿಯಲ್ಲೇ ಅವರು ಬೇಲೂರು ನಗರದ ವಿಷ್ಣು ಸಮುದ್ರ ಕೆರೆಯ ಸಮೀಪದ ಕಲ್ಯಾಣಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.ಘಟನೆ ತಿಳಿಯುತ್ತಿದ್ದಂತೆ ಬೇಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.ಈ ಕುರಿತು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


