
ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಚಿರತೆ ಸಾವು ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಶಿಕಾರಿಪುರ ತಾಲೂಕಿನ ತಡಸ ಗ್ರಾಮದ ನಿವಾಸಿ ರೈತ ಮುತ್ತಣ್ಣ ಸೇರಿದಂತೆ ಮೂವರ ಮೇಲೆ ದಾಳಿ ನಡೆಸಿದ್ದ ಚಿರತೆ ಇಂದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.ನಿನ್ನೆ ರೈತನ ಮೇಲೆ ದಾಳಿ ನಡೆಸಿದ್ದ ಇದೇ ಚಿರತೆ, ಗಂಭೀರವಾಗಿ ಗಾಯಗೊಂಡ ಮುತ್ತಣ್ಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸುವಂತೆ ಮಾಡಿತ್ತು. ಈ ಘಟನೆ ಇನ್ನೂ ಜನರ ಮನಸ್ಸಿನಲ್ಲಿ ತಾಜಾ ಇರುವಾಗಲೇ, ಇಂದು ಆ ಚಿರತೆ ಸಾವು ಕಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಮೃತ ಚಿರತೆಯ ದೇಹದಲ್ಲಿ ಯಾವುದೇ ಗಾಯಗಳ ಗುರುತುಗಳು ಪತ್ತೆಯಾಗಿಲ್ಲ. ಹೀಗಾಗಿ, ಇದು ಆಹಾರದ ಕೊರತೆಯಿಂದ ಅಥವಾ ಹೊಟ್ಟೆ ಹಸಿವಿನಿಂದ ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಆದರೆ, ನಿಖರ ಕಾರಣ ತಿಳಿಯಲು ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇನ್ನು, ಶಿಕಾರಿಪುರ ತಾಲ್ಲೂಕಿನಲ್ಲಿ ಚಿರತೆಗಳ ಸರಣಿ ಸಾವು ಪ್ರಕರಣಗಳು ಹೆಚ್ಚುತ್ತಿರುವುದು ಸ್ಥಳೀಯರಲ್ಲಿ ಭೀತಿ ಉಂಟುಮಾಡಿದೆ. ಇತ್ತೀಚೆಗೆ ತಡಸನಹಳ್ಳಿ ಪ್ರದೇಶದಲ್ಲಿ ದಾಳಿ ನಡೆಸಿದ ಮತ್ತೊಂದು ಹೆಣ್ಣು ಚಿರತೆಯ ಮೃತದೇಹವೂ ಪತ್ತೆಯಾಗಿತ್ತು.

ಒಂದು ತಿಂಗಳ ಅವಧಿಯಲ್ಲಿ ಇದು ಎರಡನೇ ನಿಗೂಢ ಸಾವು ಆಗಿರುವುದರಿಂದ, ಅರಣ್ಯ ಇಲಾಖೆ ಮೇಲ್ವಿಚಾರಣೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.ಗ್ರಾಮಸ್ಥರು ತಮ್ಮ ಸುರಕ್ಷತೆಗಾಗಿ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಚಿರತೆಗಳ ಚಲನವಲನವನ್ನು ನಿಯಂತ್ರಿಸುವುದರ ಜೊತೆಗೆ, ಜನಜೀವನಕ್ಕೆ ಹಾನಿಯಾಗದಂತೆ ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




