Shopping cart

Subtotal $0.00

View cartCheckout

Shopping cart

Subtotal $0.00

View cartCheckout

  • Home
  • ಜಿಲ್ಲೆ
  • ಬೆಂಗಳೂರು ಬ್ರೇಕಿಂಗ್: ಇಂದಿರಾನಗರದ Chinmaya Mission Hospital ನಲ್ಲಿ ಡ್ರಿಪ್ಸ್ ವೇಳೆ 6 ತಿಂಗಳ ಮಗುವಿನ ಬೆರಳು ಕತ್ತರಿಸಿದ ಆರೋಪ – ವೈದ್ಯರ ವಿರುದ್ಧ ಪೋಷಕರ ಆಕ್ರೋಶ!
ಜಿಲ್ಲೆ

ಬೆಂಗಳೂರು ಬ್ರೇಕಿಂಗ್: ಇಂದಿರಾನಗರದ Chinmaya Mission Hospital ನಲ್ಲಿ ಡ್ರಿಪ್ಸ್ ವೇಳೆ 6 ತಿಂಗಳ ಮಗುವಿನ ಬೆರಳು ಕತ್ತರಿಸಿದ ಆರೋಪ – ವೈದ್ಯರ ವಿರುದ್ಧ ಪೋಷಕರ ಆಕ್ರೋಶ!

Spread the love

ಬೆಂಗಳೂರು: Chinmaya Mission Hospital ನಲ್ಲಿ 6 ತಿಂಗಳ ಮಗುವಿನ ಚಿಕಿತ್ಸೆಯ ವೇಳೆ ನಡೆದ ಅಘಾತಕಾರಿ ನಿರ್ಲಕ್ಷ್ಯ ಪ್ರಕರಣವು ನಗರದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಪೋಷಕರ ಕಣ್ಣೀರಿಗೂ, ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

ಬಾಲಕುಮಾರ್ ಎಂಬ 6 ತಿಂಗಳ ಮಗುವಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಪೋಷಕರು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಕರೆತಂದಿದ್ದರು.

ಸಾಮಾನ್ಯ ಜ್ವರ ಚಿಕಿತ್ಸೆಗಾಗಿ ದಾಖಲಾದ ಮಗುವಿನ ಮೇಲೆ ವೈದ್ಯಕೀಯ ಸಿಬ್ಬಂದಿ ತೋರಿದ ಅಜಾಗರೂಕತೆ ಇದೀಗ ಭೀಕರ ಪರಿಣಾಮ ಉಂಟುಮಾಡಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.ಮಗುವಿಗೆ ಡ್ರಿಪ್ಸ್ ಹಾಕುವ ಸಂದರ್ಭದಲ್ಲಿ ವೈದ್ಯೆ ಮೀನಾಕ್ಷಿ ಹಾಗೂ ಸಹಾಯಕಿ ಅನಿತಾ ಎಂಬ ನರ್ಸ್ ಸೇರಿ ಡ್ರಿಪ್ಸ್ ವೈರ್ ತೆಗೆದುಹಾಕಲು ಯತ್ನಿಸಿದಾಗ ಗಂಭೀರ ನಿರ್ಲಕ್ಷ್ಯ ನಡೆದಿದೆ ಎನ್ನಲಾಗಿದೆ.

ಡ್ರಿಪ್ಸ್ ವೈರ್ ಕಟ್ ಮಾಡುವ ವೇಳೆ ತಪ್ಪಾಗಿ ಮಗುವಿನ ಸಣ್ಣ ಬೆರಳನ್ನೇ ಸಂಪೂರ್ಣವಾಗಿ ಕತ್ತರಿಸಿರುವುದಾಗಿ ಪೋಷಕರು ಕಣ್ಣೀರಿನ ನಡುವೆ ತಿಳಿಸಿದ್ದಾರೆ. ಸಾಮಾನ್ಯ ಚಿಕಿತ್ಸೆಗಾಗಿ ಬಂದ ಮಗುವಿಗೆ ಶಾಶ್ವತ ಗಾಯವಾಗಿರುವುದು ಕುಟುಂಬವನ್ನು ಆಘಾತಕ್ಕೀಡಾಗಿಸಿದೆ.“ಇವರು ನಿಜವಾಗಿಯೂ ವೈದ್ಯರೇ? ಯಾವ ವಿಶ್ವವಿದ್ಯಾಲಯದಲ್ಲಿ ಓದಿ ಬಂದಿದ್ದಾರೆ? ಯಾರು ಇವರನ್ನು ನೇಮಕ ಮಾಡಿದ್ದಾರೆ?” ಎಂದು ಪೋಷಕರು ಕಿಡಿಕಾರಿದ್ದಾರೆ. ಹಣಕೊಟ್ಟು ಪದವಿ ಪಡೆದು ಅರೆ-ವೈದ್ಯಕೀಯ ಜ್ಞಾನದಿಂದ ರೋಗಿಗಳ ಜೀವದೊಂದಿಗೆ ಆಟವಾಡಲಾಗುತ್ತಿದೆ ಎಂದು ಕುಟುಂಬ ಗಂಭೀರ ಆರೋಪ ಮಾಡಿದೆ. ವೈದ್ಯಕೀಯ ಕ್ಷೇತ್ರದ ಪವಿತ್ರತೆಗೆ ಧಕ್ಕೆಯುಂಟು ಮಾಡುವಂತಹ ಘಟನೆ ಇದಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಘಟನೆ ಬಳಿಕ ಆಸ್ಪತ್ರೆ ಆಡಳಿತವು ಸ್ಪಷ್ಟನೆ ನೀಡಲು ಮುಂದಾಗಿಲ್ಲವೆಂಬ ಆರೋಪವೂ ಕೇಳಿಬರುತ್ತಿದೆ. ತಪ್ಪು ಮುಚ್ಚಿಹಾಕಲು ಯತ್ನ ನಡೆಯುತ್ತಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ. ಮಗುವಿನ ಸ್ಥಿತಿ ಕುರಿತು ಸ್ಪಷ್ಟ ಮಾಹಿತಿ ನೀಡಲು ವೈದ್ಯರು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.ಸ್ಥಳೀಯರು ಮತ್ತು ಸಂಘಟನೆಗಳು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವೈದ್ಯಕೀಯ ಮಂಡಳಿ ಮತ್ತು ಆರೋಗ್ಯ ಇಲಾಖೆಯು ತಕ್ಷಣ ಮಧ್ಯಪ್ರವೇಶಿಸಿ ಆಸ್ಪತ್ರೆಯ ಮಾನ್ಯತೆ, ವೈದ್ಯರ ಅರ್ಹತೆ ಹಾಗೂ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.ಒಂದು ನಿರ್ಲಕ್ಷ್ಯ ಎಷ್ಟು ದೊಡ್ಡ ದುರ್ಘಟನೆಯನ್ನು ಉಂಟುಮಾಡಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.

ಜೀವ ಉಳಿಸಬೇಕಾದ ಸ್ಥಳದಲ್ಲೇ ಜೀವಕ್ಕೆ ಅಪಾಯ ಉಂಟಾಗಿರುವುದು ದುರಂತಕರ ಸಂಗತಿ. ನಿರಪರಾಧ 6 ತಿಂಗಳ ಮಗುವಿನ ಭವಿಷ್ಯಕ್ಕೆ ಶಾಶ್ವತ ಹಾನಿ ಉಂಟಾದರೆ ಅದರ ಹೊಣೆ ಯಾರು ಹೊರುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ.ಪೋಷಕರು ತಪ್ಪಿತಸ್ಥ ವೈದ್ಯರು ಹಾಗೂ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ವೈದ್ಯಕೀಯ ಪರವಾನಗಿ ರದ್ದುಪಡಿಸಬೇಕು ಮತ್ತು ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಕರಣ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.ಈ ಘಟನೆ ವೈದ್ಯಕೀಯ ವ್ಯವಸ್ಥೆಯ ಮೇಲಿನ ನಂಬಿಕೆಗೆ ದೊಡ್ಡ ಹೊಡೆತ ನೀಡಿದ್ದು, ಜನರಲ್ಲಿ ಭಯ ಹಾಗೂ ಆಕ್ರೋಶವನ್ನು ಮೂಡಿಸಿದೆ.

Leave a Reply

Your email address will not be published. Required fields are marked *

Related Posts