ವಿಜಯಪುರ: ಜಯಕರ್ನಾಟಕ ಜನಪರ ವೇದಿಕೆಯ ವಿಜಯಪುರ ಜಿಲ್ಲಾಧ್ಯಕ್ಷರಾಗಿ ಬಸವರಾಜ ಶಿಂಗನಹಳ್ಳಿ ಅವರನ್ನು ನೇಮಕ ಮಾಡಲಾಗಿದೆ. ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.ಬೆಂಗಳೂರು ನಗರದಲ್ಲಿರುವ ಸಂಘಟನೆಯ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ವಿಜಯಪುರ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡ ಬಸವರಾಜ ಶಿಂಗನಹಳ್ಳಿ ಅವರಿಗೆ ರಾಜ್ಯಾಧ್ಯಕ್ಷರು ಆದೇಶ ಪತ್ರವನ್ನು ನೀಡಿ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಸಂಘಟನೆಯ ಬಲವರ್ಧನೆ, ಜಿಲ್ಲೆಯಲ್ಲಿ ಜನಪರ ಚಟುವಟಿಕೆಗಳನ್ನು ವಿಸ್ತರಿಸುವುದು ಹಾಗೂ ಯುವಕರನ್ನು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.ಆದೇಶ ಪತ್ರ ಪ್ರದಾನ ಸಮಾರಂಭದಲ್ಲಿ ಬಾಪುಗೌಡ ಪಾಟೀಲ, ರೇವಣಸಿದ್ದ ಬಿ. ಮಣೂರ, ರುದ್ರೇಶ ಮೂರಾಳ, ಹಣಮಂತ್ರಾಯ ತಳೊಳ್ಳಿ, ನಿಂಗನಗೌಡ ಬಸರಡ್ಡಿ, ಪ್ರಭುಗೌಡ ಪಾಟೀಲ, ದೊಡ್ಡಪ್ಪಗೌಡ ಬಿರಾದಾರ, ಸಿದ್ದನಗೌಡ ನಾವದಗಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.ನವ ನೇಮಕಗೊಂಡ ಬಸವರಾಜ ಶಿಂಗನಹಳ್ಳಿ ಅವರು ಸಂಘಟನೆಯ ಆದರ್ಶಗಳು ಮತ್ತು ಉದ್ದೇಶಗಳನ್ನು ವಿಜಯಪುರ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರುವುದಾಗಿ ಭರವಸೆ ನೀಡಿದರು.






