
ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುರೇಬಾನ ಹೋಬಳಿಯಿಂದ ಕೊಣ್ಣೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಅಸಾಧ್ಯವಾಗಿರುವ ಸ್ಥಿತಿ ನಿರ್ಮಾಣವಾಗಿದೆ. ಸುಮಾರು 15 ಕಿ.ಮೀ. ವ್ಯಾಪ್ತಿಯ ಈ ರಸ್ತೆಯಲ್ಲಿ ಎಲ್ಲೆಂದರಲ್ಲಿ ಉಂಟಾದ ದೊಡ್ಡ ಗುಂಡಿಗಳು, ಚದುರಿ ಬಿದ್ದ ಕಲ್ಲುಗಳು ಮತ್ತು ಧೂಳಿನ ಮಸುಕಿನಿಂದ ವಾಹನ ಸಂಚಾರ ದುಸ್ತರವಾಗಿದೆ.

ರಸ್ತೆ ತುಂಬೆಲ್ಲಾ ಗುಂಡಿಗಳ ದರ್ಬಾರ್ ಕಾಣಸಿಗುತ್ತಿದ್ದು, ಬಸ್, ಕಾರು, ಲಾರಿ ಚಾಲಕರು ವಾಹನ ಚಲಾಯಿಸಲು ಹರಸಾಹಸ ಪಡುತ್ತಿದ್ದಾರೆ. ಬೈಕ್ ಸವಾರರು ಧೂಳು ಮತ್ತು ಹಳ್ಳಗಳ ನಡುವೆ ನಿಧಾನವಾಗಿ ಸಂಚರಿಸುತ್ತಿದ್ದು, ಪ್ರತಿದಿನ ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಮಾರ್ಗವು ರಾಮದುರ್ಗದಿಂದ ಕೊಣ್ಣೂರ ಮೂಲಕ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಆಗಿದ್ದು, ನಿತ್ಯವೂ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳು, ಕಾರುಗಳು, ಸರಕು ಸಾಗಣೆ ವಾಹನಗಳು ಸಂಚರಿಸುತ್ತವೆ. ಸುರೇಬಾನ, ಸಂಗಳ, ಲಖನಾಯಕನಕೊಪ್ಪ, ಕಲಹಾಳ, ಬೆಳ್ಳೇರಿ ಸೇರಿದಂತೆ ಅನೇಕ ಗ್ರಾಮಗಳ ಜನರು ಇದೇ ರಸ್ತೆಯ ಮೇಲೆ ಅವಲಂಬಿತರಾಗಿದ್ದಾರೆ.ಗುಂಡಿಗಳನ್ನು ತಪ್ಪಿಸಲು ವಾಹನಗಳು ತಪ್ಪು ದಾರಿಯಲ್ಲಿ ಚಲಿಸುವ ಪರಿಸ್ಥಿತಿ ಎದುರಾಗುತ್ತಿದ್ದು, ಎದುರು ದಿಕ್ಕಿನಿಂದ ವಾಹನ ಬಂದಾಗ ಅಪಘಾತ ಸಂಭವಿಸುವ ಭೀತಿ ಹೆಚ್ಚಾಗಿದೆ. ಮಳೆಗಾಲದಲ್ಲಿ ಈ ರಸ್ತೆ ಇನ್ನಷ್ಟು ಹದಗೆಟ್ಟು ಕೆಸರು-ಹಳ್ಳಗಳಾಗಿ ಮಾರ್ಪಡುವ ಆತಂಕವೂ ವ್ಯಕ್ತವಾಗಿದೆ.

ಸ್ಥಳೀಯರು ಹಾಗೂ ಪ್ರಯಾಣಿಕರು ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ರಸ್ತೆ ದುರಸ್ತಿ ಕಾರ್ಯ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ. “ದೇವರೇ, ಯಾವಾಗ ಈ ರಸ್ತೆ ಅಭಿವೃದ್ಧಿಯಾಗುತ್ತದೆ?” ಎಂಬುದು ಜನರ ನಿತ್ಯದ ಪ್ರಶ್ನೆಯಾಗಿದೆ.ಆದಷ್ಟು ಬೇಗ ರಸ್ತೆ ಸುಧಾರಣೆ ಕಾರ್ಯ ಆರಂಭವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ವರದಿ: ಶಿವಯೋಗಿ ಪುರಾಣಿಕಮಠ, ರಾಮದುರ್ಗ






