ಧಾರವಾಡ: ಸಣ್ಣ ಕಾರಣಕ್ಕೆ ಆರಂಭವಾದ ವಾಗ್ವಾದ ಎರಡು ಗ್ರಾಮಗಳ ಯುವಕರ ನಡುವೆ ಭಾರೀ ಮಾರಾಮಾರಿಗೆ ತಿರುಗಿ ಮೂವರು ಗಾಯಗೊಂಡ ಘಟನೆ ಸತ್ತೂರ ಗ್ರಾಮದ ಬಳಿ ನಡೆದಿದೆ.ತಡಸಿನಕೊಪ್ಪ ಗ್ರಾಮದ ಯುವಕರಾದ ಕಾಳಿಂಗ್, ಆಭಿಷೇಕ ಮತ್ತು ಮಂಜುನಾಥ ಎಂಬುವವರ ಮೇಲೆ ಸತ್ತೂರ ಗ್ರಾಮದ ಸುಮಾರು ಏಳು ಮಂದಿ ಯುವಕರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆಯ ವೇಳೆ ಓರ್ವನಿಗೆ ಚಾಕುವಿನಿಂದ ಇರಿದಿರುವ ಶಂಕೆಯೂ ವ್ಯಕ್ತವಾಗಿದೆ. ಗಾಯಾಳುಗಳನ್ನು ತಕ್ಷಣವೇ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಪ್ರಾಥಮಿಕ ಮಾಹಿತಿಯ ಪ್ರಕಾರ, ಕ್ಷುಲ್ಲಕ ವಿಚಾರದಿಂದ ಆರಂಭವಾದ ಜಗಳ ಹಳೆಯ ದ್ವೇಷಕ್ಕೆ ತಿರುಗಿ ಹಲ್ಲೆಗೆ ಕಾರಣವಾಗಿದೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ವಾಲ್ಮೀಕಿ ಮೂರ್ತಿ ಸ್ಥಾಪನೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಉದ್ವಿಗ್ನತೆ ಉಂಟಾಗಿತ್ತು. ಅದೇ ವಿಚಾರವನ್ನು ಮುಂದಿಟ್ಟುಕೊಂಡು ಈ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.ಇನ್ನೊಂದೆಡೆ, ಸತ್ತೂರ ಪಾಲಿಕೆ ಸದಸ್ಯನ ಮಗನೂ ಹಲ್ಲೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಘಟನೆ ಬಳಿಕ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.ಈ ಸಂಬಂಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.





